ಈಗಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮದುವೆಗೆ ಬಂದ ಹುಡುಗರಿಗೆ ಹುಡುಗಿಯರೇ ಸಿಗುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ 20-25 ಮಂದಿ ಯುವಕರು ವಿವಾಹವಾಗದೆ ಉಳಿದಿರುವುದು ಸಾಮಾನ್ಯವಾಗಿದೆ. ಬಯಲು ಸೀಮೆಯಿಂದ ಹಿಡಿದು ಮಲೆನಾಡು ಭಾಗದಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ರೇಖಾ ಎಂಬ ವಿವಾಹಿತ ಮಹಿಳೆ, ತನಗೆ ಇನ್ನೂ ಮದುವೆಯಾಗಿಲ್ಲವೆಂದು ಸುಳ್ಳು ಹೇಳಿ, ರವಿಚಂದ್ರ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇದಕ್ಕಾಗಿ ಆಕೆ ಎರಡೂವರೆ ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದುಕೊಂಡಿದ್ದಾಳೆ. ಮದುವೆ ಮಾಡಿಸುವುದಾಗಿ ಮಧ್ಯವರ್ತಿಯೊಬ್ಬರು ಹಣವನ್ನು ರವಿಚಂದ್ರನ ಪೋಷಕರಿಂದ ಪಡೆದುಕೊಂಡಿದ್ದು, ಅದರ ಪೋಟೋ ಸಾಕ್ಷ್ಯವೂ ಇದೆ.
ಮದುವೆಯಾದ ಒಂದೇ ವಾರದಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ಆಕೆಯ ಮಕ್ಕಳಿಂದ ಬಂದ ಫೋನ್ ಕಾಲ್ ಅನ್ನು ರವಿಚಂದ್ರನ ಪೋಷಕರು ಸ್ವೀಕರಿಸಿದಾಗ, ಮಕ್ಕಳು ರೇಖಾ ನಮ್ಮ ತಾಯಿ ಎಂದು ಹೇಳಿದ ಪರಿಣಾಮ, ಆಕೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುವುದು ಪೋಷಕರಿಗೆ ತಿಳಿದುಬಂದಿದೆ.
ಹಣದ ಆಸೆ ಮತ್ತು ಮೋಸ ಮಾಡುವ ಉದ್ದೇಶದಿಂದಲೇ ರೇಖಾ ಈ ಮದುವೆ ಮಾಡಿರುವುದು ಸ್ಪಷ್ಟವಾಗಿದೆ. ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ನಡೆದ ಮದುವೆಯ ನಂತರ, ತನ್ನ ಸುಳ್ಳು ಬಯಲಾಗುತ್ತಿದ್ದಂತೆ ರೇಖಾ ಗ್ರಾಮದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾಳೆ. ಆದರೆ ತುಮ್ಮಿನಕಟ್ಟಿ ಗ್ರಾಮಸ್ಥರು ಆಕೆಯನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ರವಿಚಂದ್ರ ಹಾಗೂ ಕುಟುಂಬಸ್ಥರು ರೇಖಾ ವಿರುದ್ಧ ದೂರು ನೀಡಿದ್ದು, ಹಲಗೇರಿ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.