ಬಿಗ್ಬಾಸ್ ಸೀಸನ್ 12ರಲ್ಲಿ ಗಿಲ್ಲಿ ನಟ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಬಾರಿ 45 ಕೋಟಿಗೂ ಅಧಿಕ ವೋಟ್ಗಳನ್ನು ಪಡೆದು ಜಯ ಸಾಧಿಸಿರುವುದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಸ್ಪರ್ಧಿಗಳ ಪರವಾಗಿ ರಾಜಕೀಯ ಪಕ್ಷದವರೂ ಅಖಾಡಕ್ಕೆ ಇಳಿದಿರುವುದು ಬೇರೆ ಯಾವ ಭಾಷೆಯ ಬಿಗ್ಬಾಸ್ನಲ್ಲಿ ಕಂಡುಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಈ ಅಚ್ಚರಿಯ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಗಿಲ್ಲಿ ನಟನಿಗೆ ದೊರೆತ ಭಾರಿ ಬೆಂಬಲದ ಹಿನ್ನೆಲೆಯಲ್ಲಿ, ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೆಯೇ ಎಂಬ ಪ್ರಶ್ನೆ ಮಾಧ್ಯಮಗಳಲ್ಲಿ ಕೇಳಿಬಂದಿದೆ. ವಿಶೇಷವಾಗಿ ಸಿದ್ದರಾಮಯ್ಯನವರ ಅಭಿನಂದನೆ ನೋಡಿ, ಗಿಲ್ಲಿ ನಟ ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಈ ಬಗ್ಗೆ ಗಿಲ್ಲಿ ನಟನಿಗೆ ನೇರವಾಗಿ ಪ್ರಶ್ನೆ ಕೇಳಲಾಯಿತು.
ಅದಕ್ಕೆ ಗಿಲ್ಲಿ ನಟ ಸ್ಪಷ್ಟನೆ ನೀಡುತ್ತಾ, “ಇಲ್ಲಪ್ಪಾ, ಹಾಗೇನೂ ಇಲ್ಲ. ನನಗೆ ರಾಜಕೀಯ ಸೇರುವ ಯೋಚನೆಗಳೇ ಇಲ್ಲ. ನನಗೆ ಕಾಂಗ್ರೆಸ್ನವರು ಮಾತ್ರವಲ್ಲ, ಎಲ್ಲ ಪಕ್ಷದವರೂ ಅಭಿನಂದನೆ ಸಲ್ಲಿಸಿದ್ದಾರೆ. ಮೊದಲು ಎಚ್.ಡಿ.ಕುಮಾರಸ್ವಾಮಿ ಅವರು ವಿಷ್ ಮಾಡಿದರು. ನಂತರ ಬಿಜೆಪಿಯ ಹಲವರು, ಕಾಂಗ್ರೆಸ್ಸಿನವರೂ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಜಾತಿ, ಪಕ್ಷ ಬೇಧ ಮರೆತು ನನಗೆ ಬೆಂಬಲ ನೀಡಿದ್ದಾರೆ. ಯಾವುದೋ ಒಂದು ಪಕ್ಷಕ್ಕೆ ಸಪೋರ್ಟ್ ಮಾಡುತ್ತೇನೆ ಎಂಬ ಸುದ್ದಿ ಸುಳ್ಳು” ಎಂದು ಹೇಳಿದ್ದಾರೆ.
ಇದನ್ನು ಕೇಳಿ ಅವರ ಅಭಿಮಾನಿಗಳು ಸಂತೋಷಪಟ್ಟರೂ, ಒಂದೇ ಮನವಿ ಮಾಡಿದ್ದಾರೆ – “ಅಣ್ಣಾ, ದಯವಿಟ್ಟು ರಾಜಕಾರಣಕ್ಕೆ ಬರಬೇಡಿ. ನೀವು ಒಳ್ಳೆಯ ಕಲಾವಿದ. ಕಲಾವಿದರಾಗಿಯೇ ಮುಂದುವರಿಯಿರಿ. ಎಲ್ಲರಿಗೂ ಹಾಸ್ಯದ ಹೊನಲನ್ನು ಉಣಬಡಿಸುತ್ತಾ ನಮ್ಮ ಮನರಂಜನೆಗೆ ಕಾರಣವಾಗಿರಿ” ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.